Tuesday 4 August 2015

ಪ್ರೀತಿಯ ಪ್ರತಿಯಾಗಿ ಒಂದಷ್ಟು ಪ್ರಶ್ನೆ

  ಹದಿಹರೆಯದ ಹರಿವಾಣದಲ್ಲಿ, ಆಸೆ ಬಯಕೆಗಳೆಂಬ ವೀಳ್ಯವನ್ನಿಟ್ಟು ಮೆಲ್ಲುವ ಮನಸ್ಸುಗಳಿಗೆಲ್ಲಾ, ಇದು ಮೋಜಿರಬಹುದು. ರುಚಿ ಹೆಚ್ಚೆಂದು ಅತಿಯಾಗಿ ಸುಣ್ಣದ ಲೇಪವಿಟ್ಟು ತಿಂದರೆ, ಮುಂದಾಗುವುದೇ ಅನಾಹುತ.
ಮನುಷ್ಯನ ಜೀವನದ ಅತಿಮುಖ್ಯ ಘಟಕವೇ ಹದಿಹರೆಯ. ಜೀವನದ ಆರಂಭ ಅಂತ್ಯ ಎಲ್ಲವೂ ಇಲ್ಲೆ. ಒಲ್ಲೆ ಎಂದರೂ ಕೇಳದ ಹೃದಯ, ಮೃದುವಾದ ಮಾತಿಗೆ ಮನಸೋಲುತ್ತದೆ. ಅವಳ ಕಿರುನೋಟ ಇವನ ಹೃದಯದಲಿ ಕಾಣದ ಆಸೆಯ ಊರಿನ ಕದ ಬಡಿಯುತ್ತದೆ. ಇವನ ಒಂದು ಮೆಲುನುಡಿ, ವಿಶ್ವಾಸ ಪೂರಿತ ಸಂಭಾಷಣೆ ಅವಳ ಹೃದಯದ ಜೋಪಡಿಯನ್ನು ಅರಮನೆಯ ಎತ್ತರಕ್ಕೇರಿಸುತ್ತದೆ. 
            
ವಾಸ್ತವದಲ್ಲಿ ಹೃದಯವೊಂದು, ಕೈ ಕಾಲಿನಂತೆ ಅಗತ್ಯವಾದ ಅಂಗ. ಮಿಡಿತ ಹುಟ್ಟುವುದು ಹೃದಯದಲ್ಲೆಂಬುದು ಕವಿಗಳ ಧೋರಣೆ. ಆದರೆ  ಮಿಡಿತ ಶುರುವಾಗಿದೆ ಎಂದು ಹೃದಯಕ್ಕೆ ತಿಳಿಸಲು ಮೆದುಳು  ಮಹಾರಾಯ ಅದನ್ನು ಗ್ರಹಿಸಿರಬೇಕಲ್ಲವೇ?. ಹಾಗಾದರೆ ಪ್ರೀತಿ ಹುಟ್ಟುವುದು ಮನದಲ್ಲೋ ಮೆದುಳಲ್ಲೊ?
            
ಪ್ರೀತಿ ಕಾರಣಗಳಿಂದ  ಹುಟ್ಟಿದ್ದಲ್ಲ. ಹಾಗೆ ಹುಟ್ಟಿದರೆ ಅದು ಪ್ರೀತಿಯೇ ಅಲ್ಲ ಎಂಬುದು ಬಲ್ಲವರ ನುಡಿ. ಹಾಗಾದರೆ ಎಷ್ಟೋ ಕೋಟಿ ಜೋಡಿಗಳ ನಡುವೆ ಒಲವು ಚಿಗುರೊಡೆಯಲು ಯಾವ ಕಾರಣಗಳು ಇರಲಿಲ್ಲವೇ?ಕಾರಣಗಳಿಂದ  ಬುಗಿಲೆದ್ದ ಪ್ರೀತಿಗೆ ಬಲು ಬೇಗ ಮರಣ ಖಚಿತವೇ?
            
ಕವಿಯನ್ನೇ ಕವನ ಬಲಿ ತೆಗೆದುಕೊಳ್ಳುವುದೆಂದರೆ  ಇದೆಬರೆಯ ಹೊರಟ, ನನಗೆ ನನ್ನ ಲೇಖನ ನೂರಾರು ಪ್ರಶ್ನೆ ಕೇಳಿ ದಿಕ್ಕು ತಪ್ಪಿಸುತ್ತಿದೆ. ಉತ್ತರ ಅವರವರ ಅನುಭವಕ್ಕೆ ಬಿಟ್ಟಿದ್ದು ಎಂಬ ಧೋರಣೆ ನನ್ನದು.
ನಮ್ಮ ಕಲೆ, ಸಾಹಿತ್ಯಗಳು ಪ್ರೀತಿಯನ್ನು ಇಷ್ಟೇಕೆ  ವೈಭವೀಕರಿಸುತ್ತವೆ? ಅಂತಹ ವೈಭವ ನಿಜವಾದ ಪ್ರೀತಿಯ ಧ್ಯೋತಕವೇ?
            
ಪ್ರೀತಿ ಎಂಬುದು ಒಬ್ಬ, ಇನ್ನೊಂದು ಜೀವವನ್ನು ತನ್ನದೇ ಪ್ರತಿರೂಪ ಎಂದು ತಿಳಿದು ಬಯಸುವ, ಗೌರವಿಸುವ, ಪೊರೆಯುವ, ಪ್ರೀತಿಸುವ ಪರಿಕಲ್ಪನೆ.  ಭಾವನೆ ಬಲವಾಗುತ್ತಾ  ಎರಡು ಜೀವಗಳು ಜೊತೆಯಾಗಿದ್ದರೆ, ಪರಿಪೂರ್ಣತೆ ಒದಗುವ ಅಪೂರ್ವ ಅನುಭವ ಸ್ಥಿರವಾಗುತ್ತದೆ. ಅಲ್ಲಿ ನಿಷ್ಕಾಮ, ನಿಷ್ಕಲ್ಮಶ ಮನಸ್ಸುಗಳ ಮಿಳಿತ, ಏಕತಾನತೆಯೇ ಪ್ರತಿರೂಪಿತವಾಗಿ ಬಿಂಬಿತವಾಗುತ್ತದೆ.
            
ಉಸಿರೆಳೆದುಕೊಳ್ಳದೆ ಬರೆದ  ಸಾಲುಗಳ ನಂತರ  ಲೇಖನಿಗೊಂದು ವಿರಾಮದ ಅಗತ್ಯವಿದೆ.
             
ಪ್ರೀತಿಯ ಪ್ರಣತಿ ಬೆಳಗುವಾಗ, ಅದರ ಪ್ರಕಾಶಮಾನವಾದ ಬೆಳಕಿಗಾಗಿ ಒಬ್ಬರು ಎಣ್ಣೆಯಾಗಿ ತೇಯ್ದು, ಇನ್ನೊಬ್ಬರು ಬತ್ತಿಯಾಗಿ ಬತ್ತಿದರೆ,  ಬೆಳಕ ಹೊನಲಲ್ಲಿ  ಸ್ವಾರ್ಥವೆಲ್ಲ ಕಪ್ಪು ಹೊಗೆಯಾಗಿ ಹರಿದು ಕೊನೆಗೆ ಇಲ್ಲವಾಗುತ್ತದೆ. ಇಲ್ಲವಾದರೆ ಬದುಕೆಂಬ ಹಣತೆಯ ಸುತ್ತಲೂ ಬರೀ ಕತ್ತಲು.
                                                                                                                                   




No comments:

Post a Comment