ಜೀವ ಭಾವ ಮಿಡಿವ ದೇವ
ಹೇಳು ಯಾರು ಯಾರಿಗೆ
ಭುವಿಯ ಒಡಲ ಒಡೆದು ತೆಗೆದ
ಚಿನ್ನ ಯಾರ ಕೊರಳಿಗೆ
ತುಂಡು ನಗುವ ತೋರೊ ಮೊಗವ
ಹೊರುವುದಾರ ನಗುವಿಗೆ
ತುಂಡು ಮೋಡ ತುಸುವೆ ಅಳುವುದೇಕೆ
ಯಾರ ಅಗಲಿಕೆ
ಬಡ್ಡು ಕತ್ತಿ ಮಸೆವುದೇಕೆ ಯಾರು
ಇಂದು ಗಲ್ಲಿಗೆ
ದಾರ ನೆಂದು ನಗುವುದೇಕೆ ಯಾರ
ಮುಡಿಗೆ ಮಲ್ಲಿಗೆ
ಅತ್ತ ಕಣ್ಣ ನೀರಿನಲ್ಲಿ ಎಷ್ಟು
ಪಾಲು ನೆನಪಿಗೆ
ಸತ್ತು ಮಣ್ಣು ಸೇರುವಾಗ ಎಷ್ಟು
ಅಂಗ ಪರರಿಗೆ
ನೂರು ಕೋಟಿ ಜೀವದಲ್ಲಿ ಎಷ್ಟು
ಅರ್ಥ ಬಾಳಿಗೆ
ಯಾವ ಪದದ ಅರ್ಥ ಯಾರು
ಬರೆದು ಕೊಟ್ಟರಾರಿಗೆ
ಲೆಕ್ಕವಿಟ್ಟರೆಷ್ಟು
ದಿನಕೆ ಮೂಳೆ ದೊಗಲ ಬಾಡಿಗೆ
ಕಾಮ ಕ್ರೋಧವೆಲ್ಲ ಮೊಟ್ಟೆ ಇಟ್ಟ ಪುಟ್ಟ
ಗೂಡಿಗೆ
ಬಡ್ಡು ಕತ್ತಿ- ಹರಿತವಿಲ್ಲದ ಕತ್ತಿ
Thanks and Regards,
Bhavya