ಕೆಲವೊಮ್ಮೆ ಅನಿಸುವುದು, ಕಾಯುವ ಹೊತ್ತು, ನಮಗೆ ನಮ್ಮೊಂದಿಗಿರಲು ದೊರೆಯುವ ಅವಕಾಶವೆಂದು. ಆ ಅವಕಾಶ ಅನುಭವಕ್ಕೂ ಕಾರಣವಾಗಬಹುದು.
ಅಂದೊಮ್ಮೆ, ರಸ್ತೆಯಂಚಲ್ಲಿ ಕೂತು, ನನ್ನ ಹೊತ್ತೊಯ್ಯುವ ಗಾಡಿಗಾಗಿ ಕಾಯುತ್ತಿದ್ದೆ. ಕಾಯುವುದು ಕಾದ ಕಬ್ಬಿಣದ ಮೇಲೆ ಕೂತಂತೆ ಅನಿಸುವ ನನ್ನಂತವಳಿಗೆ ಅಂದೇಕೋ ಹಾಗನಿಸಲಿಲ್ಲ. ಕಾಯುವುದು ಖುಷಿ ಎನಿಸುತ್ತಿತ್ತು. ಮುದ ನೀಡುತ್ತಿತ್ತು. ಕಾರಣವಿಷ್ಟೇ, ನಾ ಕೂತ ರಸ್ತೆಯಂಚಲ್ಲಿದ್ದ, ಹೂ ಮಾರುವವಳ ಮುದ್ದು ಕುರಿಮರಿಯ ಕರಾಮತ್ತು.
ಅದರೊಡತಿಗೋ ಅದರೊಂದಿಗಿನ ಮಾತು ಕತೆಯೇ ಜೀವನವೇನೋ ಎನಿಸುವಷ್ಟು, ಅದರ ಮೇಲೆ ಮುದ್ದು, ಮತ್ತೊಂದಿಷ್ಟು ಹುಸಿ ಮುನಿಸು. ಒಮ್ಮೆ ಪ್ರೀತಿಯಿಂದ ತುತ್ತಿಡುವಳು, ಇನ್ನೊಮ್ಮೆ " ಇನ್ನೇನು ತಿನ್ಬೇಡ, ಬರೀ ತಿಂಡಿ ತಿನ್ದ್ಕೊಂಡೆ ಬದ್ಕು " ಎಂದು ಬೈಯುವಳು. ಒಟ್ಟಿನೊಳಗೆ ಆ ನೋಟ ಕಣ್ಣಿಗೆ ಹಬ್ಬ ಎನಿಸುವಷ್ಟು ಖುಷಿ ತಂದಿತ್ತು.
ಅವಳೆದೆಯ ಪ್ರೀತಿಯನ್ನು ನನ್ನ ಮನ ಒಳಗೊಳಗೆ ಅಭಿಮಾನದಿಂದ ನೋಡಿ ನಲಿದಿತ್ತು. ಸುತ್ತಲಿನ ಪರಿವಿಲ್ಲದಂತೆ, ಅವಳಾಡುತ್ತಿದ್ದ ಮಾತಿಗೆ ನಕ್ಕು ಸುಮ್ಮನಿರುತ್ತಿತ್ತು.
ಅಡಿಕೆ ಮರದಾಕೃತಿಯ ದೇಹವೊಂದು ಬೀಡಿಯ ಹೊಗೆಯನ್ನು, ಬೀದಿಗೆ ಬಿಡುತ್ತಾ, ಗುಡಿಸಲೊಳಗಿಂದ ಪ್ರತ್ಯಕ್ಷವಾಯಿತು. ಆಕೆಯ ಗಂಡನಿರಬಹುದೋ ಎಂದು ಊಹಿಸಿ, ಕುಳಿತೆ. ಕುರಿಮರಿ ಇದ್ಯಾವ "ಪರಿವಿರದೆ", "ಪರದೆಯಿರದ"("ಬಟ್ಟೆ ಇರದ" ಎಂಬ ಅರ್ಥದಲ್ಲಿ ಬಳಸಿದ್ದೇನೆ.) ತನ್ನ ದೇಹವನ್ನು ಆಚೀಚೆ ಒಯ್ಯುತ್ತ, ಕಟ್ಟಿದ್ದ ಗೂಟಕ್ಕೆ ತನ್ನ "ಪರಿದಿಯೊಳಗೆ" ಪ್ರದಕ್ಷಿಣೆ ಹಾಕುತ್ತಿತ್ತು.
ಹೊರ ಬಂದ ಯಜಮಾನ, ಬೀಡಿಯ ತುಂಡನ್ನು ಎಸೆಯಲು ಮನಸ್ಸಿಲ್ಲದೆ, ತನ್ನ ಕಿವಿಯ ಸಂದಿಯಲ್ಲಿ ತುರುಕಿಸಿಟ್ಟ. ಒಂದು ಕೈಯಲ್ಲಿ ಮಾಸಿದ ಲುಂಗಿಯ ತುದಿ, ಇನ್ನೊಂದು ಕೈಯಲ್ಲಿ ಕುರಿಮರಿಯ ಕುಣಿಕೆಯನ್ನು ಹಿಡಿದು, ನಡೆಯುತ್ತ ಹೊರಟ. ಆ ದೃಶ್ಯ ಕಂಡು, ಸಿರಿವಂತರ "ವಾಕಿಂಗ್" ಎಂಬ ಪದ ನೆನಪಿಗೆ ಬಂದು, ಒಳಗೊಳಗೆ ನಕ್ಕೆ.
ಬಡವರ ಪ್ರೀತಿ ನನ್ನ ಮನ ತಣಿಸಿತ್ತು. ಗೌರವ ಭಾವ ಇನ್ನಷ್ಟು ಬಲಿಯಿತು. ಆತ್ಮೀಯತೆಯಿಂದ ಮನೆ ಒಡತಿಯನ್ನು ಮಾತಾಡಿಸುವ ಮನಸ್ಸಾಗಿ, ಏನೊಂದೂ ತೋಚದೆ ಮೊದಲ ಮಾತಿಗೆ ಪ್ರಶ್ನೆಯನ್ನೆಸೆಯುತ್ತ ಕೇಳಿದೆ. "ಅಮ್ಮ ಒಂದೇ ಒಂದು ಕುರಿಮರಿಯನ್ನೇಕೆ ಸಾಕಿದ್ದೀರಿ??" ಧ್ವನಿಯ ತುಂಬಾ ಆತ್ಮೀಯತೆಯ ನಗುವಿತ್ತು.
ಉತ್ತರ ನನ್ನ ಕಲ್ಪನಾ ಲೋಕಕ್ಕೆ ಬೆಂಕಿ ಹಚ್ಚಿತ್ತು. " ಬರೋ ಜಾತ್ರೆಗೆ ಬಲಿ ಕೊಡೋಕೆ" ಎಂದಳಾಕೆ. ಮುಖದಲ್ಲಿನಿತು ನಗುವಿಲ್ಲದೆ. ಮತ್ತೊಮ್ಮೆ ಕಟುಕನ ಪ್ರೀತಿ ಕ್ರೌರ್ಯದಲ್ಲಿ ಕೊನೆಯಾದುದನ್ನು ಕಂಡು ಮನ ಭಾವವಿಲ್ಲದೆ ಬೆತ್ತಲಾಯಿತು. ಸುತ್ತೆಲ್ಲ ಕತ್ತಲಾಯಿತು...
tumba channagide bhavya...
ReplyDeletechennag ide, namma manasanna matte matte prashnisute ninna baraha
ReplyDeleteThanks Sandesh :)
ReplyDeleteChennagide Bhavya
ReplyDelete