Sunday 15 September 2013

ಅವಳು

                                                      

                            

                                              
                 ಅವಳು ಹುಣ್ಣಿಮೆಯನ್ನು ಹೋಲುವುದಿಲ್ಲ, ಮಾಯಾಂಗನೆಯ ಮುಖವದಲ್ಲ, ಮಾತು ಮಾತಿಗೆ ಮುತ್ತುದುರುವಂತೆ ನಗುವ ಸುರಸುಂದರಿಯು ಅಲ್ಲ, ಅವಳ ಕಂಡು ಮಾರುಹೋಗಿ, ಸಿಗದೆ ಮರುಗುವರೇನೂ ಇಲ್ಲ. ಕವಿಗಳ ಕಲ್ಪನೆಯ ಹೆಣ್ಣಲ್ಲ, ಕುರಿತು ಬರೆದರು ಓದಿ ತಿಳಿಯಬಲ್ಲವಳಲ್ಲ.
                ಆಕೆ ಮುಗ್ಧೆ, ಹಾಗೆಂದು ಏನೂ ಅರಿಯದವಳಲ್ಲ. ಆಕಳೊಂದು ಕರುವನ್ನು ಹೆತ್ತಾಗ ಖುದ್ದಾಗಿ ಹೆರಿಗೆಯ ನೋವನ್ನನುಭವಿಸಿದವಳು, ಚಿಗುರುವ ಗುಲಾಬಿ ಗಿಡದಲ್ಲಿ ತನ್ನ ಬಾಲ್ಯ ಕಂಡವಳು, ಮನ ನೊಂದಾಗ ಬಿಕ್ಕಳಿಸದೆ ತೋಟದ ಬಾಳೆ ಮರವನ್ನು ದಿಟ್ಟಿಸಿದವಳು. ತುಳಸಿ ಗಿಡವನ್ನು ದೇವರೆಂದವಳು, ಬೀಜವೊಂದು ಮೊಳಕೆಯೊಡೆದಾಗ ಅದರಲ್ಲಿ ಜೀವಾಂಕುರದ ಭಾವ ಕಂಡು, ಅದನ್ನು ಬಿತ್ತಿ, ಜೀವವನ್ನೆರೆದವಳು, ಮುಂಜಾನೆಯೊಡನೆ ಅರಳುವಳು, ಮುಸ್ಸಂಜೆಯೊಡನೆ ಮುದುಡುವಳು.
               ಇಂಥ ಮನಸುಳ್ಳವಳು ಅಲ್ಲೆಲ್ಲೋ ಬೆಟ್ಟದಲ್ಲೋ, ಬಯಲಲ್ಲೋ, ಸುತ್ತ ಗುಡ್ಡದಲ್ಲೋ, ದಟ್ಟಡವಿಯಲ್ಲೋ ಕಳೆದು ಹೋದವಳಲ್ಲ. ನಮ್ಮೆಲ್ಲರ ಮಧ್ಯ ತನ್ನನ್ನೇ ಕಳೆದು ಕೊಂಡವಳು, ತನ್ನತನವ ಹುಡುಕುವ ಪ್ರಯತ್ನದಲ್ಲಿ ಸೋತವಳು.
               ಬರುವಾಗಲೇ ಬಂಧವನ್ನು ಜೊತೆಗೆ ತಂದವಳು, ಅಮ್ಮನಿಗೆ ಹಲವು ಸಲ ತಾಯಾಗುವಳು. ಕಂದಮ್ಮನ ಮಡಿಲಲ್ಲಿ ಮಗುವಂತೆ ಮಲಗುವಳು. ಸ್ವಚ್ಛ ಮನಸ್ಸಿನ ಇಚ್ಛೆ ಅರಿಯುವ ಬಾಳ ಸಂಗಾತಿ ಇವಳು.
               ಅದೆಂತಹುದೋ ನೋವು ಆ ಒಡಲಲ್ಲಿ, ದುಃಖವನೆಲ್ಲ ನುಂಗಿ, ತನ್ನವರಿಗಾಗಿ ನಗುವನ್ನು ಹೆರುವಳು. ಮತ್ತೆ ಮತ್ತೆ ಒತ್ತರಿಸಿ ಬಂದ ದುಃಖ ಅದುಮಿ ಸಂತೋಷದ ಮುಖವಾಡ ಧರಿಸುವಳು.

                ಪದಾರ್ಥಗಳ ಬೆಲೆ ಹೆಚ್ಚಾದಾಗ, ರಸ್ತೆಯಂಚಲ್ಲಿ ನಿಂತು ಸೆರಗು ಸಿಕ್ಕಿಸಿಕೊಂಡು ದೊಡ್ಡ ದನಿಯಲ್ಲಿ ಜಗಳ ತೆಗೆದ ಅವಳ ಕೋಪದ ಮುಖ ಕಂಡು, ಛೀ ಎಂದವರೇ ಹೆಚ್ಚು, ಅವಳಂತರಾಳ ಅರಿಯದೆ. ಇವರಿಗೇನು ಗೊತ್ತು ಆಕೆ ಕುಡುಕ ಗಂಡನನ್ನು ಸಹಿಸಿಕೊಂಡು, ಮೂರು ಮಕ್ಕಳ ಜವಾಬ್ದಾರಿ ಗಂಡಸಂತೆ ಹೊತ್ತವಳೆಂದು. ಆ ದನಿಯಲ್ಲಿನ ಮೌನದ ಭಾವ ಅರಿಯದೆ, ಅಪಾರ್ಥ ಮಾಡಿಕೊಳ್ಳುವವರೇ ಹೆಚ್ಚು. ಆ ಕಣ್ಣುಗಳು ಅರಸುತ್ತವೆ ಸಂತೈಸುವ ಮನವನ್ನು, ಕಣ್ಣೊರೆಸುವ ಕೈಗಳನ್ನು.

3 comments:

  1. ನಿನ್ನ ಗದ್ಯದ ಅನನ್ಯತೆಯೆಂದರೆ ಅದಕ್ಕಿರುವ ಕಾವ್ಯಾತ್ಮಕತೆ ಮತ್ತು ಪ್ರಾಮಾಣಿಕತೆ.
    ಹೀಗೆ ಬರೆಯುತ್ತಿರು.

    ReplyDelete