Thursday 8 October 2015

ಕುಶಾಲಿಗೆ ಬರೆದದ್ದು

"ಏ ಬಾರಾ.. ಬತ್ತಿಲ್ಯಾ? ಬಾ ಅಲಾ.."
"ನಾ ಬತ್ತಿಲ್ಲಾ"
"ಏ ಬಾ ಮರತ್ಯಾ.. ಆಗಳಿಂದ ಕೇಂತಿದ್ದೆ ಅಲನಾ.."
"ನೀ ಕೇಂಬುದೇ ಬ್ಯಾಡ. ನಾ ಬತ್ತಿಲ್ಲ ಅಂದ್ರೆ ಬತ್ತಿಲ್ಲ. ಇಲ್ ನಿತ್ತದ್ ಎಂತಕೆ.  ಹೋಗ್ ಬೇಕಾದಲ್ಲಿಗೆ"
"ಹೋಗ್ ಆಂಬೂಕೆ ಮೆಜೆಸ್ಟಿಕ್ ನಿನ್ ಅಪ್ಪಯ್ಯಂದಾ?"
ನಾನಾದರೆ ನಕ್ಕೆ ಬಿಡುತ್ತಿದ್ದೆನೇನೋ, ಅವಳು ನಗಲಿಲ್ಲ. ಮುಖ ಬಿಗಿದುಕೊಂಡಿದ್ದಳು. ಸಾಧಾರಣ ಮೈ ಕಟ್ಟು, ಗೋಧಿ ಬಣ್ಣ. ತುಟಿಗೆ ಒಂಚೂರು ಜಾಸ್ತಿಯೇ ಬಣ್ಣ ಹಚ್ಚಿದಂತಿತ್ತು. ಅವನು ಸಿಕ್ಕುವ ಸಡಗರಕ್ಕೇನೋ. 
                 ನಿಲ್ಲಬೇಡ ಅಂದವಳು, ನಿಲ್ಲಲಿ ಅಂತಲೇ ಹೇಳಿದಳೇನೊ. ಹೌದಪ್ಪ!! ಈ ಹುಡುಗಿಯರನ್ನ ಅರ್ಥಮಾಡಿಕೊಳ್ಳುವುದಕ್ಕಿಂತ ಜೈಲಲ್ಲಿ ಜಲ್ಲಿ ಕುಟ್ಟುವುದೇ ಮೇಲು.
ಅವನು ಕೊಂಚ ಹಿಂದೆ ಸರಿದ.
" ಟೈಮ್ ವೇಷ್ಟ್ ಮಾಡ್ಬೇಡ ಬಾ" ಧ್ವನಿ ಗಡುಸಾಗುತ್ತಿತ್ತು.
ಈ ಕಡೆಯಿಂದ ಬರಿ ಮೌನರಾಗ.
ಮೆಜೆಸ್ಟಿಕ್ ಅಲ್ಲಿ ನಿತ್ತು ಅವಳು ಬಸ್ಸಿಗಾಗಿ ಕಾಯುತ್ತಿದ್ದಳು. ಮತ್ತವನು ಅವಳಿಗಾಗಿ. ಅಲ್ಲಿಗೆ ಬಸವೇಶ್ವರ ನಗರದ ಕಡೆಗೆ ಹೋಗುವ ಬಸ್ ಬಂದೇ ಬಿಟ್ಟಿತು. ಅದು ಹೇಗೆ ಮನಸ್ಸಾಯಿತೊ ಅಂತೂ ಬಸ್ ಹತ್ತಿಯೇ ಬಿಟ್ಟಳು.  ಅವ ಹೋದನ ಅಂತ ಒಮ್ಮೆ ಕತ್ತು ಬಗ್ಗಿಸಿ, ಹೆಚ್ಚು ಬಗ್ಗದೆ ನೋಡಿದಳು. ಅವ ಅಲ್ಲೆ ಇದ್ದ, ಒಳಗೊಳಗೆ ಚೂರು ಖುಷಿ ಆಕೆಗೆ. ಅವ ಕೈ ಮುಗಿಯುವುದೊಂದು ಬಾಕಿ ಇನ್ನೆಲ್ಲ ಸನ್ನೆಗಳಲ್ಲಿ ದಯವಿಟ್ಟು ಬಂದುಬಿಡು ಅನ್ನುತ್ತಿದ್ದ. ಆಕೆ ಬಯಸಿದ್ದಳೋ ಇಲ್ಲವೋ ತಟ್ಟನೆ ಬಸ್ಸು ಹತ್ತಿ ಪಕ್ಕ ಕೂತು, "ಬಾರಾ" ಎಂದು ದೈನ್ಯವಾಗಿ ಅಂದ. ಆಕೆ ಇನ್ನೆತ್ತಲೋ ನೋಡ ತೊಡಗಿದಳು. ಅಯ್ಯೊ ಕರ್ಮವೇ!!! ಇವನಿಗೆ ಊಟ ತಿನ್ನಿಸಲಿಕ್ಕೆ ಇವನಮ್ಮ ಅದೆಷ್ಟು ಗೋಗರೆದಿದ್ದಳೋ, ಶಾಲೆಗೆ ಹೋಗು ಪುಣ್ಯಾತ್ಮ ಎಂದು ಅಜ್ಜಿ ಎಷ್ಟು ಸಲ ಅಂದಿದ್ದಳೋ, ಅಪ್ಪ, “ ಮರಾಯ ಇನ್ನು ನನ್ಗೆ ನಿನ್ನ
ಕಾಲಿಗೆ ಚಪ್ಪಲಿ ಹೊರುವುದಕ್ಕಾಗುವುದಿಲ್ಲ, ನೀ ಬರಿಗಾಲಲ್ಲಿ ಹೋಗು ಶಾಲೆಗೆ, ಇಲ್ಲ ಒಂದು ಜೊತೆ ಕಬ್ಬಿಣದ ಚಪ್ಪಲಿ ಮಾಡಿಸಿಕೊಡುತ್ತೇನೆ” ಅಂದು ಹೆಣಗಿದ್ದರೋ, ಆದರೆ ಇವನು ಕುಲ ತಿಲಕ ಅದ್ಯಾವುದು ಮಂಡೆಗೆ ಹೋಗದೆ, ಅವರಿಗೂ ಒಂದು ಫೀಲಿಂಗ್ ಉಂಟು ಎಂದು ಅನಿಸದೆ, ತನಗೆ ಬೇಕೆಂದಂತೆ ಬದುಕಿದವ, ಇವತ್ತು ಬಸ್ಸಿನಲ್ಲಿ ಹೀಗೆ ಗೋಗರೆಯುವಾಗ, ನಗು ಬರುತ್ತದೆ. ಅಂತದ್ಯಾವುದಿದು ಸೆಳೆತ ಅನ್ನಿಸುತ್ತದೆ. ಶೋಕಿಯಾ ಅಥವ ನನ್ನ ಓರಗೆಯವರಿಗೆಲ್ಲ ಇರುವಾಗ ನನಗೂ ಒಬ್ಬಳಿರಲಿ  ಬೇಜಾರಿಗೆ ಅಂತಲ ಇವರ ವರಸೆ? ಏನೊ ನನಗಂತು ಅರ್ಥವೇ ಆಗುವುದಿಲ್ಲ. ಹಾಂ! ಹೇಳುವುದು ಮರೆತೆ, ಆಕೆ ಒಲ್ಲೆ ಎಂದಳು ಆತ ಬಸ್ ಇಳಿದು ಹೋದ. ಕತೆ ಇಲ್ಲಿಗೆ ಮುಗಿಯುವುದಿಲ್ಲ. ಒಮ್ಮೆಲೆ ನೂರು ಬಣ್ಣದ ಯೋಚನೆಗಳು ಅವಳ ಮನಸೊಳಗೆ. ಹೋಗಲಾ ಬೇಡವಾ, ಹೋದರೇನು ಹೋಗದಿದ್ದರೇನು ಇನ್ನು ಏನೇನೋ, ಆತ ಕರೆದದ್ದೆಲ್ಲಿಗೆ ಇವಳು ಬರುವುದಿಲ್ಲ ಅಂದದ್ದೆಲ್ಲಿಗೆ ಎರಡೂ ನನಗೆ ಗೊತ್ತಿಲ್ಲ.. ಸುಮ್ಮನೆ ಇಬ್ಬರು ನನ್ನ ಬರಹದ ವಸ್ತುಗಳಾದರು. ಬಸ್ಸು ಹೊರಟಿತು. ಇನ್ನೇನು ಅವನ ಕಣ್ಣಿನ ಮಿಂಚು ಮಣ್ಣು ಸೇರುವುದರಲ್ಲಿತ್ತು, ಕೂತಿದ್ದವಳು, ಡ್ರೈವರ್ ಹತ್ತಿರ ಹೋಗಿ ಸ್ವಲ್ಪ ಬಸ್ ನಿಲ್ಸಿ ಸಾರ್ ಅಂದಳು. ಚಾಲಕನ ಮುಖದಲ್ಲಿ ಅಸಹನೆಯ ಪುಟ್ಟ ಗೆರೆಯೊಂದು ನಿಟ್ಟುಸಿರಿಟ್ಟಿತು.
ಅರ್ಥ
ಕುಶಾಲು- ತಮಾಶೆ
ಮರತ್ಯಾ - ಮರಾಯ್ತಿ
ಆಗಳಿಂದ - ಆಗ್ಲಿಂದ
ಕೇಂತಿದ್ದೆ - ಕೇಳ್ತಿದ್ದೀನಿ
ಅಲನಾ - ಅಲ್ವ
ಕೇಂಬುದು - ಕೇಳೋದು
ಅಪ್ಪಯ್ಯಂದಾ - ಅಪ್ಪಂದಾ?
ಅಂಬೂಕೆ - ಅನ್ನೋಕೆ

ಓರಗೆ - ಸಮಾನ ವಯಸ್ಕರು 

No comments:

Post a Comment