Tuesday, 1 September 2015

ಹೊರೆ


ಶುದ್ಧೋಧನ ಒಬ್ಬಂಟಿ, ಹಾಗಂತ ಯಾರೂ ಇಲ್ಲದವನಲ್ಲ. ಇರುವವರೆಲ್ಲರೂ ದೂರದಲ್ಲಿದ್ದಾರೆ. ಅವರು ಬರುವುದು ಇವನಿಗೂ ಅಷ್ಟು ಇಷ್ಟವಲ್ಲ. ತನ್ನ ಪ್ರಪಂಚಕ್ಕೆ ಅವರೆಲ್ಲ ಸರಿ ಹೊಂದುವವರಲ್ಲ ಅನ್ನುವುದೇ ಅವನ ಭಾವನೆ.
ಅವನಿಗೂ ಒಂದು ಪ್ರೇಮವಿತ್ತು. ಅಲ್ಲಿ ಅದಲು ಬದಲಾದ ನೂರಾರು ಕನಸುಗಳಿದ್ದವು. ಹಂಚಿಕೊಂಡ ಸಾವಿರ ಕ್ಷಣಗಳಿದ್ದವು. ಆದರೆ ಆಕೆ ಇವನಿಂದ ದೂರವಾಗಿ ಸುಮಾರು ವರ್ಷಗಳೇ ಆದವು. ಆದರೂ ಆಕೆ ಬರೆದ ನೂರು ನೂರು ಪತ್ರಗಳ ಕಂತೆ ಇವನಲ್ಲಿತ್ತು. ಈತ ಭಗ್ನ ಪ್ರೇಮಿ. ಆಕೆಗೆ ತಾನು ಕೊಟ್ಟ ಉಡುಗೊರೆಗಳನ್ನು ಸಂಬಂಧ ಮುರಿದಾಗ ಆಕೆ ತಿರುಗಿ ಕೊಟ್ಟಿದ್ದರೂ, ಅವೆಲ್ಲವನ್ನು ಸೇರಿಸಿ ಒಂದು ಸಂಗ್ರಹಾಲಯವನ್ನೇ ಮಾಡಿದ್ದ. ಎಷ್ಟೋ ಸಲ ಅವಳ ನೆನಪು ಅತಿಯಾಗಿ ಕಾಡಿದಾಗ ಅವಳ ವಂಚನೆ ನೆನಪಾಗಿ ಅವೆಲ್ಲವನ್ನೂ ಸುಡಬೇಕೆಂದು ಮನಸ್ಸಾದರೂ ಕೈ ಬರುತ್ತಿರಲಿಲ್ಲ. ದಿನವೂ ಅದಾವುದೋ ಭಾರ ಇವನ ಮನಸ್ಸನ್ನು ಹಿಡಿದು ಜಗ್ಗುತ್ತಿತ್ತು. ಕುಗ್ಗಿಸುತ್ತಿತ್ತು.
ಹೀಗಿದ್ದಾಗ ಒಂದು ದಿನ ಇವನ ದೂರದ ಸಂಬಂಧಿ ಗೋಪಾಲಣ್ಣನ ಕುಟುಂಬ ಇವನ ಮನೆಗೆ ಬಂತು. ೩ ಮಕ್ಕಳಿರುವ ತುಂಬು ಸಂಸಾರ. ಬೇಡವೆಂದು ಹೇಳಲಾಗದೆ ಶುದ್ಧಿ ಚೆನ್ನಾಗಿಯೇ ಉಪಚರಿಸಿ ಅಡುಗೆಗೆ ಏನಾದರೂ ತರಲು ಹೊರಗೆ ಹೋಗಿದ್ದ. ವಾಪಾಸು ಬರುವವನಿಗೆ, ಮನೆಗೆ ಹತ್ತಿರತ್ತಿರಾಗುತ್ತಿದ್ದಂತೆ ಒಂದೊಂದೇ ಕಾಗದ ತುಂಡುಗಳು ಬೆತ್ತಲಾಗಿ ಮೆಟ್ಟಿಲುಗಳ ಮೇಲೆಲ್ಲ ಬಿದ್ದಿದ್ದು ಕಂಡಿತು. ಅದರಲ್ಲಿ ತನ್ನ ಮತ್ತು ಅವಳ ಬರಹಗಳೆಲ್ಲ ಕಂಡವು. ಅವಳಿಗೆ ತಾನು ಕೊಟ್ಟ ಗೊಂಬೆ ಕೈ ಮುರಿದು ಬಿದ್ದಿತ್ತು. ಮತ್ತರ್ಧ ಕಾಗದದ ಕಟ್ಟು ಬಚ್ಚಲಿನ ನೀರಿನ ತೊಟ್ಟಿಯಲ್ಲಿ ದೋಣಿಯಾಗಿದ್ದವು. ನೆನಪುಗಳೆಲ್ಲಾ ನೀರಿನ ಪಸೆ ತಾಗಿ ಹಸಿಯಾಗಿದ್ದವು. ಹೃದಯ ಒಳಗೆ ಕಿರಿಚುತ್ತಲೇ ಇತ್ತು. ಹೊರಗೆ ಧ್ವನಿ ಬರಲಿಲ್ಲವಷ್ಟೆ. ಒದ್ದೆಯಾದ ಹರಕು ಕಾಗದವೊಂದನ್ನು ಕೈಗೆತ್ತಿಕೊಂಡು ಕುಸಿದು ಓದತೊಡಗಿದ. ಅವನ್ನು ಕೂಡಿಟ್ಟು ೧೦ ವರ್ಷಗಳೇ ಕಳೆದಿತ್ತು. ಅದರಲ್ಲಿದ್ದ ಬರಹವನ್ನು ಆತ ಮತ್ತೆಂದೂ ತೆಗೆದು ನೋಡಿರಲಿಲ್ಲ. ಆಶ್ಚರ್ಯವಾಯಿತು!! ಇಷ್ಟು ವರ್ಷಗಳು ತಾನು ಅವುಗಳನ್ನು ತೆರೆದು ನೋಡೇ ಇಲ್ಲ ಎಂದ ಮೇಲೆ ಕೂಡಿಟ್ಟುಕೊಂಡದ್ದಾದರೂ ಯಾತಕ್ಕೆ?!!
ಓದುತ್ತಾ ಹೋದ. ಓದುವಾಗ ಅವನ ಭಾವನೆಗಳಿಗೂ, ಆಕೆ ಬರೆದಿದ್ದಕ್ಕೂ ಭಾವನೆಗಳ ಅಂತರ ಸಾಕಷ್ಟು ಕಾಣಹತ್ತಿತು. ಅವಳು ಅವನನ್ನು ಪುಸಲಾಯಿಸಿ ಬರೆದದ್ದು, ಅವನು ಅವಳಿಗೆ ಬರೆದದ್ದು  ಎಲ್ಲಾ ಸುಳ್ಳು ಸುಳ್ಳೇ ಅನಿಸಿತು. ಭಾರವಾದ ಎದೆಯ ಕೊನೆಯ ಕಣ್ಣ ಹನಿ ಕಾಗದದ ಮೇಲೆ ಬಿದ್ದಾಗ ಅವನ ಮುಖದಲ್ಲಿ ಮೊದಲ ನಗು ಅರಳಿತು.

Thanks and Regards,

Bhavya

Wednesday, 12 August 2015

ಅವಳೊಳಗಿನ ನಾನು

ಆಕೆ ಗರ್ಭಿಣಿ. ಇನ್ನೇನು ದಿನ ತುಂಬುವುದರಲ್ಲಿತ್ತು. ನೀರು ನಿಂತಾಗಿನಿಂದ ಪಟ್ಟ ಕಷ್ಟ, ವಾಂತಿ, ಎಲ್ಲಾ ನಗಣ್ಯ ಅವಳಿಗೆ. ಕನ್ನಡಿ ಎದುರು ನಿಂತಾಗೆಲ್ಲಾ ವಿಕಾರವಾಗಿ ಕಾಣುತ್ತಿದ್ದ ದೇಹ, ದುಃಖ ತರುವ ಬದಲು ಅವಳ ಮುಖದಲ್ಲೊಂದು ನಗುವ ಗೆರೆಯನ್ನು ಬರೆಯುತ್ತಿತ್ತು.  ಒಳಗೆ ಪೋರ ಒದ್ದಾಗಲೆಲ್ಲಾ ಕಚಗುಳಿಯಿಟ್ಟ ಅನುಭವ.  ತನ್ನವನನ್ನು ಮತ್ತೆ ಮತ್ತೆ ಕರೆದು ಮಗುವ ಎದೆ ಬಡಿತವನ್ನು ಕೇಳಿಸುವ ತುಡಿತ.  ಒಂದೊಂದು ಹಣ್ಣು ತಿನ್ನುವಾಗಲೂ, ಹಣ್ಣಿನ ಬಣ್ಣವನ್ನು ತನ್ನ ಮಗುವಿನ ಕೆನ್ನೆಯ ಬಣ್ಣಕ್ಕೆ ಆರೋಪಿಸಿ ನಗುತ್ತಿತ್ತು ಜೀವ".
ಆದರೆ ವಿಜೃಂಭಿಸುವ ಉಸಿರನ್ನು, ಅನಂತ ತವಕದ ಮಧ್ಯೆ ನಾ ಹೇಗೆ ನುಸುಳಿದೆನೊ, ಒಳ ಸುಳಿದೆನೊ ಗೊತ್ತಿಲ್ಲ.  ಒಂದೇ ಸರ್ತಿಗೆ ಎಲ್ಲ ಅದಲು ಬದಲು.
ಅವಳೆಂದೂ ನನ್ನನ್ನು ಬಯಸಿ ಬಂದವಳಲ್ಲ, ಹತ್ತಿರವೂ ಸುಳಿದವಳಲ್ಲ. ಮಾತಾಡಿಸಿ ಮುದ್ದಾಡಿಯೂ ಇಲ್ಲನನ್ನ ಪರಿವೂ ಅವಳಿಗಿಲ್ಲದಂತೆ ಇದ್ದವಳು. ಅವಳೇ ನನ್ನ ಬಳಿ ಬಂದಳೋ, ಇಲ್ಲ ನಾನೆ ಅವಳ ಬಳಿ ಹೋದೆನೊ, ಒಟ್ಟಿನಲ್ಲಿ ನಮ್ಮಿಬ್ಬರ ದೇಹ ಒಂದಾಗಿದ್ದವು.  ನಾನು ಅವಳೊಳಗಿನವನೇ ಎನ್ನುವಷ್ಟು ಅವಳೊಳಗೆ ಬೆರೆತಿದ್ದೆ, ಅವಳೊಳಗಿರುವ ಇನ್ನೊಂದು ಜೀವವನ್ನೂ ಲೆಕ್ಕಿಸದೆ. ಈಗ ಆಕೆ ಮಗುವನ್ನೇನೋ ಹೆತ್ತಳು. ಆದರೆ ಬಾಣಂತಿಯ ಕಳೆಯಿರಲಿಲ್ಲ. ಒಣಗಿದ ಕಣ್ಣಲ್ಲಿ ಇದ್ದ ತುಸು ನೀರೂ ಬತ್ತಿದೆ. ಅದಕ್ಕೂ ಬೇಜಾರುಎಷ್ಟು ದಿನ ಜೊತೆ ನೀಡೀತು. ಗಂಡನಿಗೆ ಹೆಂಡತಿಯೀಗ ಕುರೂಪಿ, ಹತ್ತಿರ ಬರಲಾರದಷ್ಟು ಕ್ಷುಲ್ಲಕಳು. ಆದರೂ ಅವಳ ತಪ್ಪೇನಿತ್ತು ಇದರಲ್ಲಿ. ಅವಳನ್ನು ಬಯಸಿ ಹೋದವನು ನಾನಲ್ಲವೇ. "ಯಾರದೋ ತಪ್ಪಿಗೆ ಯಾರಿಗೋ ಯಾತನೆ".
ಅವಳ ಎದೆ ಹಾಲು ಮಗುವಿಗೆ ಕುಡಿಸದಂತೆ ಸಂಪೂರ್ಣ ನಿಷೇಧ. ಕಣ್ಣೆದುರಿಗೆ ಕಣ್ಣೂದಿಸಿಕೊಂಡು ಅಳುವ ಮಗುವಿಗೆ, ಎದೆಯಲ್ಲಿ ಒತ್ತರಿಸುವ ಪ್ರೀತಿಯನ್ನುಣಿಸದೆ, ಬಾಟಲಿಯ ಚೂರನ್ನು ತುರುಕಿದರೆ ತಡೆದೀತೆ ಜೀವ?
ಇನ್ನೆಷ್ಟು ದಿನ ಕಳೆದೀತು ಹಂಗಿನರಮನೆಯಲ್ಲಿ. ತವರಿಂದ ತಂದಿದ್ದ ಒಡವೆಗಳೆಲ್ಲ ಖರ್ಚಿಗೇ ಆಯಿತು.  ಉಳಿದದ್ದೊಂದು ಬಟ್ಟೆಯ ಗಂಟು.  ಮೊದಲೆಲ್ಲಾ ಎರಡೇ ಹೆಜ್ಜೆ ದೂರ ಅನಿಸುತ್ತಿದ್ದ ತವರಿನ ದಾರಿ ಈಗ ಮಾರು ದೂರ. ನಡೆಯುವ ಹೆಜ್ಜೆ ಸೋತಿದೆ. ಅವಳು ಅವಳಾಗಿಯೆ ಸೋತಳೆ. ಅಥವಾ ನನ್ನ ಇರುವಿಕೆ ಅವಳನ್ನು ಸೋಲಿಸಿತೆ? ಆಕೆ ಸೋಲುವುದನ್ನು ನೋಡಲಾಗುತ್ತಿಲ್ಲ. ಆದರೂ ಅವಳನ್ನು ಬಿಡಲಾಗುತ್ತಿಲ್ಲ. ಬಣ್ಣದ ಬಟ್ಟೆಯೊಂದನ್ನು ಆಕೆ ತಲೆಗೆ ದಿನವೆಲ್ಲ ಕಟ್ಟಿ ತಿರುಗುವುದು, ಬಾಣಂತನದ  ಸಂಭ್ರಮದ ಮೆರವಣಿಗೆಗಲ್ಲ, ಬದಲಿಗೆ ಬೋಳು ತಲೆಯನ್ನು ಅಪಹಾಸ್ಯದ ನಗುವಿಗೆ ಬಲಿಯಾಗದಂತೆ ಮುಚ್ಚಲು.
ಆಕೆಯ ಕಣ್ಣೀರಿನ ಕಾರಣ ನಾನು. ನಾನೊಬ್ಬ ಕೊಲೆಗಡುಕ. ಬೆಟ್ಟದಷ್ಟು ಕರುಣೆ ಕಣ್ಣಲ್ಲಿದ್ದರೂ ಕರ್ತವ್ಯಕ್ಕೆ ಕಟ್ಟುಬಿದ್ದ ಕಂದಾಚಾರಿ. ನಾನೊಬ್ಬ ಸಿಗರೇಟಿನಿಂದ ಹೊರಬಂದ ತ್ಯಾಜ್ಯ, ಹೊಗೆಯೆಂಬ ದುಷ್ಟ, ನತದ್ರಷ್ಟ. ನಾನಿದ್ದ ಹಾದಿಯನ್ನು ಹಾದದ್ದಷ್ಟೆ ಆಕೆ ಮಾಡಿದ್ದ ತಪ್ಪು. ಚಟ ಹಿಡಿದವನ ಖುಶಿಯ ಔತಣದ ಎಂಜಲೆಲೆಯಾಯ್ತು ಅವಳ ಬದುಕು.
ನಿಧಾನವಾಗಿ ನಾನವಳನ್ನು ಆವರಿಸಿದೆ. ಆಕೆಗೆ ಇದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ನನ್ನ ಸಾಮರ್ಥ್ಯದ ಎದುರು  ಚೂರು ಚೂರೆ ಹೋರಾಡಿದೊಡ್ಡ ಮಟ್ಟದಲ್ಲಿ ಸೋತಳು. ಆಕೆ ಆಗಲೆ ಕ್ಯಾನ್ಸರ್ ಗೆ ತುತ್ತಾದಳು. ಮುಂದೊಂದು ದಿನ ಅವಳು, ಅವಳೊಳಗಿನ ನಾನು ಜೊತೆಯಲ್ಲೇ ಮಣ್ಣಾದೆವು, ಅವಳ ಒಡಲ ಮಗುವಿನ ಮುಖವನ್ನೂ ನೋಡದೆ

ಪ್ರೀತಿ ಇಲ್ಲದ ಮೇಲೆ

ಒಲ್ಲದ ಮನಸ ಒಲಿಸುವುದೆಂತು
ಕಲಕಿದ ಉದಕವ ಕುಡಿಯುವುದೆಂತು
ಕಲ್ಲಿನ ಮೇಲೆ ಮಳೆ ಸುರಿದಂತೆ
ಇಲ್ಲದ ಪ್ರೀತಿಯಲಿದೆ ಬರಿ ಕೊರತೆ

ಪ್ರೀತಿ ಇಲ್ಲದ ಮೇಲೆ
ಮಳೆಯದು ಭುವಿಯನು ಅಪ್ಪುವುದೆಂತು
ಹುಲ್ಲದು ಹುಲ್ಲೆಯ ತಣಿಸುವುದೆಂತು
ಕಾಮನ ಬಿಲ್ಲಲಿ ಸೇರಿದ ಬಣ್ಣವು
ನೋಡುವ ಕಣ್ಣನು ಕುಣಿಸುವುದೆಂತು

ಪ್ರೀತಿಯೆ ಇಲ್ಲದ ಮೇಲೆ
ಬೆಳಕನು ಬೀರುವ ಕಿರಣದ ಕಂತೆ
ಗಾಳಿಗೆ ಒಯ್ಯಲು ಬೇಸರವಂತೆ
ಮಧುವನು ಹೊತ್ತಿಹ ಸುಮಗಳ ಸಂತೆ
ದುಂಬಿಯ ದೂರಕೆ ತಳ್ಳುವ ಚಿಂತೆ

ಆದರೂ ಪ್ರೀತಿಯಿಲ್ಲದ ಮೇಲೆ
ಹುಡುಕದಿರು ಒಲವಿರದ ಮನದಲ್ಲಿ ಮಮತೆ
ಅಳಿಸಿಬಿಡು ನೀ ಅತ್ತು ಬರೆದ ಕವಿತೆ
ಹೊರಡುತಿರು ಕಾಲ ಕರೆದೆಡೆಗೆ ತೊರೆದೆಲ್ಲ ಜಡತೆ

ಹಿಂತಿರುಗಿ ನೋಡದಿರು ಪ್ರೀತಿಸುವೆ ಮತ್ತೆ

ಕುವೆಂಪು

ಜಗದ ಜವನಿಕೆ ಸರಿಸಿ                  (ಜವನಿಕೆ = ಪರದೆ)
ಮಲೆಗೆ ಮೈಯಾನಿಸಿ                   (ಆನಿಸಿ = ಒರಗಿ)
ನವ ಉದಯದೊಳಾಡುವನ
ಬಾಲಲೀಲೆ

ಪದ ಪದಕೂ ಪದಕಟ್ಟಿ
ಪದದೆದೆಯ ಕದ ತಟ್ಟಿ
ಭಾವವನು ಬಸಿದವನ
ಭಾಷ್ಯಮಾಲೆ

ನವಿಲುಕಲ್ಲಲಿ ಕಂಡ           (ನವಿಲುಕಲ್ಲು = ಕುಪ್ಪಳ್ಳಿಯ ಒಂದು ಸ್ಥಳ)                  
ಸೂರ್ಯರಶ್ಮಿಯ ಹಿಂಡ
ಕಾವ್ಯದಲೆ ಮುತ್ತಿಟ್ಟ
ರಾಸಲೀಲೆ

ಕಪ್ಪಿಟ್ಟ ಮೋಡ ಬರಿ
ಕಾನನದ ಕಾಡ ಝರಿ
ಬಿದ್ದಿದ್ದ ನವಿಲು ಗರಿ
ಇವನ ಶಾಲೆ

ಇವನ ಭಾಗ್ಯವ ಅರಿತ
ಮೂರು ಮುಖದವ ಬೆವತ
ಸೋತು ಸತಿಯಲಿ ಪೇಳ್ದ
ಸಮರವೊಲ್ಲೆ

ರಸ ಋಷಿಯ ಧ್ಯಾನದಾ
ನೀರವತೆ ಸಂಧಿಸಿತು
ಅವನ ಕಂಠೀರವದ
ನಾದಲೀಲೆ

ಕವಿಶೈಲದಲಿ ಕುಳಿತು
ರವಿಯನೋದುತಲಂದು
ಕವಿಯಾದ ಮನುಜನಿವ
ವಿಶ್ವಪಥಿಕ…

ಕಾಲದ ಕರೆ

ಹಗಲು ರಾತ್ರಿಗಳಲ್ಲಿ
ನಿದ್ರೆ ಕಳೆದೆಚ್ಚೆತ್ತ ಮನ
ಮತ್ತೆ ನಿದ್ರೆಯನು ಬಯಸುತಿಹುದು

ಏನಾಗಬೇಕೆಂಬ ಬಯಕೆ
ಚಿಗುರುವ ಮೊದಲೆ
ಹೊದಿಕೆಯಡಿಯಲಿ ಹೇಡಿ ಗೊರೆಯುತಿಹುದು

ಸುಖ ಸ್ವಪ್ನಗಳಾಚೆಯಲಿ
ಬದುಕ ಬಯಸದ ಬದುಕು
ಸ್ಫೂರ್ತಿಯನು ಸವತಿಯೆಂದೆಣಿಸುತಿಹುದು

ಚೂರು ಬೆಳಕಲ್ಲಿಯು ತುಂಬ
ನೋಯುವ ಕಣ್ಣು
ನೆರಳಲ್ಲು ಕರಿಗಾಜು ಬೇಡುತಿಹುದು

ನಿಮಿಷ ಗಳಿಗೆಯ ಹಿಂದೆ
ಗಂಟೆ ನಿಮಿಷದ ಹಿಂದೆ
ಮೈಕೊಡವಿ ನಿಲದಂತೆ ನಡೆಯುತಿಹುದು

ಮನವೆ ನೀ ಸಹಕರಿಸಿ
ನಿದಿರೆಯನು ಸಂಹರಿಸಿ

ಕಣ್ಗಳಿಗೆ ಲಂಚವನು ಕೊಡಲುಬಹುದೆ?

ಅವಳ ನೋವು ನನ್ನ ಹಾಡು

ಬಣ್ಣ ಕಳಚಿದ ತನ್ನ
ಬದುಕ ಕತ್ತಲೆಯಲ್ಲೆ
ಕುಂಚವನದ್ದಿ
ನಿರ್ಜೀವ ಬೊಂಬೆಗೆ
ಬಣ್ಣ ಹಚ್ಚುತಿದ್ದಳು
ಕೊಂಡು ಹೋಗುವವನ
ನಿರ್ಜೀವ ನೋಟು ಇವಳ
ಬಾಳ ಕತ್ತಲೆಯ ಕೊಂಚ
ಓಡಿಸೀತೆ?
ಈಕೆ ಅಶೋಕ ವನದ ಸೀತೆಯಂತೆ
ಅವಳ ಜೀವ ರಾಮನಲ್ಲಿತ್ತು
ಇವಳ ಜೀವ ಕಣ್ಣೀರಿನಂತೆ ಮೆಲ್ಲ ಜಾರಿ
ಬೊಂಬೆಯ ಕಾಲಡಿ ಬಿತ್ತು
ಒಂದರೊತ್ತಿಗೊಂದು ಪಶುಗಳಂತೆ
ಭೂಮಿಗೆ ಬಿದ್ದ ಮಕ್ಕಳು ಮಗ್ಗುಲಲ್ಲಿ
ಹುಟ್ಟಿದ ತಾರೀಖಿನ ಲೆಕ್ಕವಿಲ್ಲ ತಾಯಿಗೆ
ಸರ್ಕಾರದಲ್ಲಿ ದಾಖಲೆಯಿಲ್ಲ
ಇವುಗಳ ಹುಟ್ಟಿಗೆ
ಅನ್ನವೊ ಮಣ್ಣೊ ಮಕ್ಕಳ
ಹೊಟ್ಟೆ ಸೇರಿದುದೇನೆಂಬುದು ಗೊತ್ತಿಲ್ಲ
ಬೊಂಬೆಯ ಮುಟ್ಟುವಾಗೊಮ್ಮೆ
ಕೈ ತೊಳೆಯುವುದನೊಂದು ಮರೆತಿಲ್ಲ
ಮಣ್ಣಿನ ಬೊಂಬೆಯಂದ ಅವಳ ಮಾಸಿದ
ಮೂಗುತಿಯನು ಅಣಕಿಸುತಿದೆ
ಅದರ ವಾರಸುದಾರ ಬರುವನೋ ಇಲ್ಲವೊ
ಅದೂ ತಿಳಿದಿಲ್ಲ.
ಬರುವವರೆಗು ಅವರಿಬ್ಬರದು ಸೀತೆಯ ಪಾಡೆ
ಬೊಂಬೆಯ ವಾರಸುದಾರನೆನ್ನಿ ಇಲ್ಲ ಅವಳ ಮೂಗುತಿಯದು
ಎರಡರದು ಒಂದೆ ಹಾಡೆ
ಬರೆದ ಬ್ರಹ್ಮನಿಗೆ ಕನಿಕರವಿಲ್ಲ

ಅರೆರೆ ಬೊಂಬೆಯನು ಹಿಡಿವ ಕೈ ಬದಲಾಯಿತು
ಮಗುವಿನ ಗಂಜಿಗೊಂದಿಷ್ಟು ಕಾಸಾಯಿತು.
ಆದರೆ ಮೂಗುತಿಯ ಗತಿ?

ಅದಿನ್ನೂ ಕಾಯುತಿದೆ ಅವಳವನಿಗಾಗಿ

ಮೋಡದ ಮುನಿಸು

ಉಸಿರುಗಟ್ಟಿ ಮುನಿಸಿಟ್ಟು ಕೊಂಡ ಮೋಡದ
ಮುಖ ಕಪ್ಪುಕಟ್ಟಿತ್ತು
ಗಮನಿಸಿದವರಾರಿಲ್ಲವೇನೊ ಪ್ರೀತಿ ತೋರಿ,
ಬಿಕ್ಕಿ ಅತ್ತೇ ಬಿಟ್ಟಿತು.

ಅಣ್ಣನ ಮೋಡದ ಮಳೆಹನಿಯೊಂದು ತನಗೇ ಬೇಕೆಂದು
ಬೆಳಿಗಿನಿಂದ ಹಟ ಹಿಡಿದಿತ್ತು,
ಓಡಿ ಹೋಗಿ ಕಸಿದುಕೊಳ್ಳಲೊಮ್ಮೆ ಅವನ ತಲೆಗಿವನ 
ತಲೆ ತಾಗಿ ಗುಡುಗಿತ್ತು

ಅಗಲದಾಕಾಶದ ಮೂಲೆಯೊಂದನು ಸೇರಿ
ಬರಿ ಅತ್ತದ್ದೆ ಆಯ್ತು,
ಅಣ್ಣ ಕೊಡಲಿಲ್ಲ ತಮ್ಮ ಬಿಡಲಿಲ್ಲ ಮುನಿಸಿಗೆ
ಬಣ್ಣ ಬದಲಾಯ್ತು

ತಮ್ಮ ಅತ್ತಿದ್ದಕ್ಕೆ ಸಣ್ಣ ಆ ಮುದ್ದು ಹನಿ 
ಅಣ್ಣನ ಕಣ್ಣಿಂದ ಬಿತ್ತು
ಇದ ಕಂಡು ಆಣ್ಣನಲಿಹ ಮತ್ತೊಂದು ಹನಿ ಅದನು
ಹಿಡಿಯಲು ಹೋಯ್ತು

ಇಬ್ಬರನು ಅಗಲಿದ ಮುದ್ದು ಹನಿಗಳು
ಕಡಲ ಪಾಲಾಯ್ತು
ಮೋಡಗಳಿಗೀಗ ನಗು ಉಕ್ಕಿ ಬಂತು
ಮತ್ತೆ ಬಣ್ಣ ಬದಲಾಯ್ತು