Saturday, 18 January 2014

ನನ್ನ ಅಜ್ಜಿ ಮನೆ…

                     
                                                                                                                         ಚಿತ್ರ: ನನ್ನ ಅಜ್ಜಿ ಮನೆ.                     

   ನಾ ಹುಟ್ಟಿದ ಒಂದು ಪುಟ್ಟ ಊರು. ಆ ಊರಿನಲ್ಲಿಯ ಮನೆಗಳೆಲ್ಲ ನನಗೆ ಪರಿಚಿತ. ಬಹುಶ: ಇದೊಂದು ಆಧುನಿಕ ಜಗತ್ತಿನ ಕಲ್ಪನೆಗೆ ದೂರವಾದ ಸಂಗತಿ. ನನ್ನೂರು ಎಂದು ಸ್ವಾರ್ಥದಿಂದ ಹೇಳಿದ್ದು, ಅಲ್ಲಿಯವರೆಲ್ಲ ನನ್ನವರು ಎಂಬ ಆತ್ಮೀಯತೆಯಿಂದ.
          
            ನನ್ನಲ್ಲಿ ಕವಿತ್ವ ಎಂಬುದೇನಾದರು ಹುಟ್ಟಿದ್ದರೆ ಅದನ್ನು ಬೆಳೆಸಿದ್ದು ನನ್ನ ಅಜ್ಜಿ ಮನೆ ಇರುವ ಕಿರಿದಾದ ಗ್ರಾಮ, ಕುರ್ಪಾಡಿ. ತಲೆ ಎತ್ತಿದರೆ ಹಚ್ಚ ಹಸಿರು ಚಲ್ಲಿ ನಿಂತ ಕಾಡುಗಳ ಸಾಲು, ಅವು ಹೊತ್ತು ನಿಂತ ಸ್ವಚ್ಛ ಉಸಿರಿನ ಸ್ವಸ್ಥ ಗ್ರಾಮ.
            ಆಧುನಿಕತೆಯ ಅಬ್ಬರದ ನಿಕಟ ಪರಿಚಯವಿಲ್ಲದ್ದಕ್ಕೋ ಏನೋ ಈ ಗ್ರಾಮ ಇನ್ನೂ ನನ್ನ ಮನಸ್ಸಿಗೆ ಬಲು ಹತ್ತಿರ. ಮುಗ್ಧತೆಯ ರೂವಾರಿ, ಪ್ರಕೃತಿಯಮ್ಮನ ಪುಟ್ಟ ಮರಿ, ಎಂತಹವರನ್ನೂ ಕವಿಯಾಗಿಸಬಲ್ಲ ಧೀಮಂತ ಗುರು.
            
            ಈಗಲೂ ನಾ ಹುಟ್ಟಿದ ಹಳೆಮನೆಯ ಮೆಟ್ಟಿಲಲ್ಲೊಮ್ಮೆ ಕಾಲೂರಿ ಕೂತಾಗ, ನಾ ಆಡಿದ ಗೊಂಬೆಯಾಟಗಳ ನೆನಪಾಗುತ್ತದೆ. ಪೆನ್ಸಿಲ್, ರಬ್ಬರ್ ಗಾಗಿ ಧರಣಿ ಕೂತು ಕೊನೆಗೆ ಸಿಕ್ಕಾಗ ಗೆದ್ದೆ ಎಂದು ಉಬ್ಬಿದ ಪ್ರತಿ ನಿಮಿಷವೂ ನೆನಪಿನಲ್ಲಿದೆ. ಅದೇ ಮೆಟ್ಟಿಲ ಮೇಲೆ ಕೂತು ಓದುತ್ತಿದ್ದ ಬಾಲಮಂಗಳ, ತುಂತುರು ಬಾಲ್ಯವನ್ನು ಇನ್ನಷ್ಟು ಚಂದವಾಗಿಸಿತ್ತು.

ಹಾಲು ಹಲ್ಲು ಉದುರಿದಾಗ ಹಾಲುಗಲ್ಲದ ಮೇಲೆ ಒತ್ತರಿಸಿ ಬಂದ ಕಣ್ಣೀರ ನೆನಪಿದೆ, ಹಿರಿಯರನ್ನನುಸರಿಸಿ 40 ರ ಹರೆಯದ ಹೆಂಗಸರನ್ನೆಲ್ಲಾ ಅಕ್ಕ ಎಂದು ಕರೆಯುತ್ತಿದ್ದ ನಮಗೆ ಆಂಟೀ ಪದದ ಪರಿಚಯ ಅಷ್ಟು ಬೇಗ ಆಗಿರಲಿಲ್ಲ.

ಒಂದೊಮ್ಮೆ ಅಕ್ಕ ಎನಿಸಿಕೊಳ್ಳುತ್ತಿದ್ದ ಹೆಂಗಸರ ನೆರೆಗೂದಲು, ಸಂದ ಮಳೆಗಾಲಗಳ ಕಥೆ ಹೇಳುತ್ತಿತು. ಆಗ ಜೀವಕ್ಕೆ ಹತ್ತಿರವಾಗಿದ್ದ ಸಂಬಂಧಗಳು ಈಗ ಅತಿ ದೂರದವು. ಮತ್ತೆನೀತೋ ಹೊಸ ಸಂಬಂಧಗಳನ್ನು ಹೊತ್ತು ಸಾಗುತ್ತಿದೆ ಬದುಕು.

ಜಗತ್ತನ್ನು ಹೊಸ ನಿಲುವಿಂದ ನೋಡುವ ಕಣ್ಣು ಹೊತ್ತು ಮತ್ತೊಮ್ಮೆ ಹಳೇ ಜಗಲಿಯ ಮೆಟ್ಟಿಲಲ್ಲಿ ಕೂತು ನೋಡಿದೆ. ಬದುಕಿನ ಬಣ್ಣ ಬದಲಾಗುತ್ತಿದ್ದ ಪರಿ ಅರ್ಥವಾಗುತ್ತಾ ಹೋಯಿತು. ಜೋಕಾಲಿಯಾಡುತ್ತಿದ್ದ ಬೀಳಿನ ಮರಗಳ ಮಧ್ಯೆ ನಿತ್ತು ನೋಡಿದೆ. ಹಾಗೆ ಮರಗಳನ್ನು ಸವರಬೇಕೆನಿಸಿತು. ಸವರಲು ಪ್ರತಿಸ್ಪಂದನದ ಅನುಭವ ನೀಡಿತು.

ಕಣ್ಣರಳಿಸಿ ಕಂಡಾಗೆಲ್ಲ ಆ ಅಂಗಳದಲ್ಲಿ ಅಲ್ಲಲ್ಲಿ ಕುಳಿತು ಆಡುತ್ತಿದ್ದ ನನ್ನ ಪುಟ್ಟ ಜೀವ ಕಾಣುತ್ತದೆ.ಮತ್ತೆ ಮತ್ತೆ ನನ್ನ ಕಂಗಳು ಅರಸುತ್ತವೆ ಕಳೆದ ಬಾಲ್ಯವನ್ನು, ಕಾಲ ತೆಗೆದುಕೊಂಡ ಮುಗ್ಧತೆಯನ್ನು

Saturday, 21 December 2013

ಯಾಕಿಷ್ಟು ಅವಸರ


                ಎಡೆಯಿಲ್ಲದೆ ಶ್ರಮಿಸುತ್ತಿದ್ದ, ಬಿಡುವಿಲ್ಲದೆ ಮೈಲಿಗಟ್ಟಲೆ ಕ್ರಮಿಸುತ್ತಿದ್ದ ನನ್ನ ಯೋಚನೆಗಳಿಗೆ ಹಾಕಿಕೊಂಡ ಪ್ರಶ್ನೆ ಇದು. ಹೆಜ್ಜೆ ಹೆಜ್ಜೆಗೂ ಲಜ್ಜೆಗೇಡಿ ಬುದ್ಧಿ ಲಾಭನಷ್ಟಗಳ ತರ್ಕದಲಿ ತೊಡಗಿ ಬದುಕಿನ ಮಾರುಕಟ್ಟೆಯಲ್ಲಿ ಸಮಯವನ್ನು ಇನ್ನಿಲ್ಲದಂತೆ ಅತಿ ಬೆಲೆಗೆ ಮಾರಿಕೊಳ್ಳಲು ಹವಣಿಸುತ್ತದೆ.

                ಆಗಾಗ ಮಿತಿಮೀರಿದ ವೇಗದ ಪಥಕ್ಕೊಂದು ಅಲ್ಪವಿರಾಮ ಹಾಕಿ, ಒಂದಷ್ಟು ಮೌನವನ್ನು ಬಾಚಿ, ನೆಟ್ಟ ನೋಟದಲಿ ನಮ್ಮ ಸುತ್ತ ದಿಟ್ಟಿಸಿದರೆ, ಯಾಂತ್ರಿಕ ಲೋಕದ ಆಚೆಗಿನ ಬದುಕು ತೆರೆದುಕೊಳ್ಳುತ್ತದೆ. ನಾವಾಡುತ್ತಿದ್ದ ಮನೆಯ ಜಗಲಿ ಮುದಿಯಾಗಿ ಪೇಲವವಾಗಿದೆ, ಅಮ್ಮನ ಮುಖದಲ್ಲಿ ಸುಕ್ಕು, ನಾವೆಷ್ಟು ವರ್ಷಗಳಾಯ್ತು ಅಮ್ಮನನ್ನು ಇಷ್ಟು ಹತ್ತಿರದಿಂದ ಸರಿಯಾಗಿ ನೋಡಿ ಎಂಬುದನ್ನು ಚುಚ್ಚಿ ಹೇಳುತ್ತದೆ, ಅಪ್ಪ ಈಗ ಬುದ್ಧಿ ಕಲಿಸುವ ಮೇಷ್ಟ್ರಂತೆ ಕಾಣದೆ, ಒಬ್ಬ ಒಳ್ಳೆ ಸ್ನೇಹಿತನಾಗಲು ಹವಣಿಸುವ ಭಾವ ಕಣ್ತುಂಬಿಸುತ್ತದೆ.

             ಸುತ್ತಲಿನ ಜಗತ್ತಿಗೆ ಅಂಟಿದ ಭಾವುಕತೆಯ ಸರಪಳಿಯ ಅನನ್ಯ ಕೊಂಡಿಯ ಭಾಗ ಈ ಬದುಕು. ಒಬ್ಬನೇ ಬದುಕುತ್ತೇನೆ ಯಾರ ಹಂಗಿಲ್ಲದೆ ಎಂಬ ಹಕ್ಕು ಯಾರಿಗೂ ಇಲ್ಲ ಇಲ್ಲಿ.

              ಒಂಚೂರು ಕಳೆದು ಹೋಗುವುದು ಆರೋಗ್ಯಕರವೇ. ಮಗುವ ನಗುವನ್ನು ಕಂಡಾಗ ಮಗುವಾಗುವ ಜೀವ, ಹಕ್ಕಿಯ ಹಾರಾಟದಲ್ಲೊಂದು ಸ್ವಾತಂತ್ರ್ಯದ ಅನುಭವ ಪಡೆಯುವ ಖುಷಿ, ಸಿಪಾಯಿಗಳಂತೆ ಗರ್ವತೋರಿ ನಡೆವ ಇರುವೆಯ ಸಾಲಿನ ಮಧ್ಯೆ ಬೆರಳಿಟ್ಟು ಚದುರಿಸುವ ತುಂಟ ಕ್ರೌರ್ಯ, ಮೊದಲೆಲ್ಲ ನೀರ ಒಳ ಹೊಕ್ಕು ರಾಡಿ ಮಾಡಿದ ಕೆರೆಯ ತಟದಲ್ಲಿ ಶಾಂತವಾಗಿ ಕೂತು ಸೂರ್ಯಾಸ್ತ ನೋಡುತ್ತಾ ಎಲ್ಲೋ ಮರೆತ ಹಾಡನ್ನು ಗುನುಗುವ ಹೊತ್ತು, ಎಲ್ಲೋ ಕೇಳಿದ ಗಂಟೆಯ ನಾದಕ್ಕೆ ಅರಿವಿಲ್ಲದಂತೆ ಮುಗಿಯುವ ಕೈ, ಎಷ್ಟೇ ಮುಂದುವರಿದ ಸಮಾಜದ ನಡುವಿದ್ದರೂ, ಸದಾ ಮನಸ್ಸನ್ನು ಹಸಿರಾಗಿ ಮಗುವಾಗಿಡುವ ಸ್ವರ್ಗ ಸಮಾನವಾದ  ಅಜ್ಜಿಮನೆ, ಆ ಪುಟ್ಟ ಗ್ರಾಮ, ಅದರ ಜೊತೆ ಬೆಸೆದ ಮುಗ್ಧ ನೆನಪು, ಇವಲ್ಲವೇ ಬದುಕನ್ನು ಪೂರ್ತಿಯಾಗಿಸಬಲ್ಲವು.
             
                 ಯಾಕೋ ಗೊತ್ತಿಲ್ಲ ಎಲ್ಲಿಂದ ಶುರುಮಾಡಿದರೂ ನನ್ನ ಬರವಣಿಗೆ ಅಜ್ಜಿ ಮನೆಯ ಹಿತ್ತಲನ್ನೊಮ್ಮೆ ಹಾದು ಹೋಗಿಯೇ ಹೋಗುತ್ತದೆ.
                 ಪ್ರತಿಯೊಬ್ಬನೂ ನಾಳಿನ ಖುಷಿಗಾಗಿ ಇಂದು ದುಡಿಯುತ್ತಾನೆ, ಮುನ್ನಡೆಯುತ್ತಾನೆ. ನಡೆಯುವ ಭರದಲ್ಲಿ ಇಂದಿನ ಪುಟ್ಟ ಖುಷಿಗಳು ಅವನ ಕಾಲಡಿ ಧೂಳಾಗಬಾರದು. ಪ್ರತಿ ಕ್ಷಣವನ್ನು ಅನುಭವಿಸಿ ಬದುಕ ಬಲ್ಲವ ನಿಜವಾದ ಕಲೆಗಾರ.

                 ಬೆಳದಿಂಗಳ ರಾತ್ರಿಯಲಿ, ತೆರೆದ ಬಾನಡಿ ಮಲಗಿ, ಚುಕ್ಕೆಗಳನ್ನೆಣಿಸಲು ಯಾವ ಸಾಧನೆಯ ಅಗತ್ಯ ಇಲ್ಲ ಅಥವಾ ಯಾರ ಅಪ್ಪಣೆಯೂ ಬೇಕಿಲ್ಲ.
                 ನಿಜವಾದ ಯಶಸ್ಸು ಹಣ, ಅಥವಾ  ಅಂತಸ್ತಿಂದ ಅಳೆಯುವಂತದಲ್ಲ.  ಸುಂದರವಾದ ಕ್ಷಣಗಳನ್ನು ಹುಟ್ಟು ಹಾಕುವ, ಇರುವುದನ್ನು ಅನುಭವಿಸಿ, ಹಂಚಿ ಹರಡುವ, ಮನಗಳ ನಡುವಿದ್ದು ಅಂತಹ ಬದುಕು ಕಟ್ಟುವುದೇ ಸಾರ್ಥಕತೆ

Saturday, 23 November 2013

ನಕ್ಷತ್ರವಿರದ ಬಾನು

                                                                                

ಒಂದು ಮುಸ್ಸಂಜೆ ಹೊತ್ತು
ಮಂಜು ಹನಿಯುತ್ತಿತ್ತಾಗ
ನಕ್ಷತ್ರವನರಸಲು ಹೊರಗೆ ಬಂದೆ
ಆಗಸದಲಿ ಕಂಡುದು ಚಂದ್ರನೊಂದೇ

ಯಾವೂರ ಜಾತ್ರೆಯೊ ಆಕಾಶದಲ್ಲಿ
ಮತ್ತಾರದೋ ಮದುವೆ ಸಂಭ್ರಮದಲ್ಲಿ
ಯಾವ ನಕ್ಷತ್ರದ ಹುಟ್ಟು ಹಬ್ಬವೋ ಇಂದು
ಆಕಾಶ ತೊರೆದಿವರು ಹೊರಟುದೆಲ್ಲಿ

ಮಳೆಯಾಗ ನಿಂತಿತ್ತು, ಮಂಜೆಲ್ಲ ಕರಗಿತ್ತು
ತಾರೆ ತೋರಣವೊಂದು ಮಿನುಗುತ್ತಿತ್ತು
ಮೆಲ್ಲ ಜಾರುತಲೊಂದು ತಾರೆ
ಆಕಾಶದಿಂ ಭುವಿಗೆ ಜಾರಿ ಬಿತ್ತು

ಹಿರಿಯನೊಬ್ಬನನು ಅಗಲಿದ ನೋವಿಗೇನೋ
ಸುರಿಸಿದವು ಮತ್ತೆ ಅಶ್ರು ಪುಷ್ಪ
ಮನವಾಗ ಮುದುಡಿತು, ಮಳೆ ಮೈಯ ನೆನೆಸಿತು
ನೆನೆದು ನಕ್ಕಿತು ಮನ ವಿಧಿಯ ಕಲ್ಪ

Saturday, 16 November 2013

ಬದುಕಿನ ಬಣ್ಣ

                                      
                                      


ಆ ಸುಂದರ ಕ್ಷಣಗಳವು
ದಿನಗಳವು ಮರಳಿ ಮತ್ತೆ ಬಾರದವು
ಅರಳಿದವು ಮನಗಳಿವು
ನೆನೆದು ಮಗುಗಳಾದವು

       ದಾರಿಯಲ್ಲಿ ಬಿದ್ದ ಹರಿದ
       ಮುರಿದ ಆಟಿಕೆಗಳ ಹೆಕ್ಕುತ್ತಿದ್ದ
      ದಿನಗಳವು ಕ್ಷಣಗಳವು
      ಮತ್ತೆ ಮರಳಿ ಬರದವು

ಅಪ್ಪ ತಂದ ಸೈಕಲನ್ನು ಅಣ್ಣ
ಮೆಲ್ಲ ಕಲಿಯುವಾಗ, ಹಿಡಿದು ಜಗ್ಗಿ
ತಳ್ಳಿ ಬಿದ್ದ ಮುದ್ದು
ಕ್ಷಣಗಳವು ದಿನಗಳವು

    ಅಣ್ಣ ಇಲ್ಲದಾಗ ಸದ್ದು
    ಆಗದಂತೆ ಕದ್ದು ನಾನೇ
    ಎದ್ದು ಬಿದ್ದು ಸೈಕಲ್ ಹೊಡೆದು
    ಹರುಷಗೊಂಡ ದಿನಗಳವು ಕ್ಷಣಗಳವು

ನನ್ನ ಅಣ್ಣ ನನ್ನ ಬದುಕ ಬಣ್ಣ
ಅವನ ಕಣ್ಣ ಮರೆಯಲೆನ್ನ
ಜೀವ ನಿಲ್ಲದು, ಕಾಣದಿರೆ
ಅವನ ಚಣ ಅಳುವು ಬರುವುದು

   ಮದುವೆಯಾದ ಮರುಗಳಿಗೆ,
   ಅವನ ತೊರೆಯೊ ಕ್ಷಣವದೆನ್ನ
   ಕಿತ್ತು ತಿಂದಿತು, ಸೈಕಲನ್ನು ತೋರಲೆನ್ನ
   ಹ್ರದಯ ನಕ್ಕಿತು,