ಈ ಲೇಖನ ಅಳಿದು ಅಳಿಯದ ಪ್ರೀತಿಯ ಗೆಳತಿ 'ಸುಧಾ'ಳಿಗೆ ಅರ್ಪಿತ.
ಕಡಲ ಮೊರೆತದ ದನಿಗೆ, ಕಾದು ಕೂತವರು. ಸಂತೆಯ ಸದ್ದಿಗೆ ದೂರ ಹೋದವರು. ಭಾರೀ ಭೋಜನದಿಂದ ಎದ್ದು ಹೋದವರು, ಬೆಳದಿಂಗಳ ಕೈ ತುತ್ತ ಬೇಡಿ ಬಂದವರು. ಕತ್ತಲ ಸಹವಾಸ ಬೇಡವೆಂದವರು, ಅಮಾವಾಸ್ಯೆಯ ಬಾನಡಿ ಇರುಳು ಕಳೆದವರು. ಬದುಕಲ್ಲಿ ದಾಖಲಾತಿ ಇಲ್ಲದೆ ಬಂದು ಬಿಡುವವರು. ಹೇಳದೆ ಕೇಳದೆ ಗುರುತು ಬಿಡುವವರು. ಪ್ರಶ್ನಿಸುವ ಮೊದಲೇ ಹೊರಟು ಹೋಗುವವರು. ಎಷ್ಟಿಲ್ಲ ಈ ರೀತಿ ಬಂದು ಬದುಕು ಬದಲಾಯಿಸುವವರು.
ನಮ್ಮ ಬದುಕ ಮೇಲೆ ನಮಗೆಷ್ಟು ಹಕ್ಕಿದೆಯೊ ಅದರ ಎರಡರಷ್ಟು, ಬದುಕಿಗೆ ನಮ್ಮ ಮೇಲಿದೆ. ಕೆಲವನ್ನು ನಾವು ಆರಿಸಿಕೊಂಡರೆ, ಇನ್ನೂ ಕೆಲವನ್ನು ಬದುಕು ತನ್ನಷ್ಟಕ್ಕೆ ಸದ್ದಿಲ್ಲದೆ ಸೆಳೆದುಕೊಳ್ಳುತ್ತದೆ. “ಯಾವುದೋ ಕವಿಯ ಸಾಲಿಗೆ ಯಾರದೋ ರಾಗ, ಯಾವುದೋ ಮಣ್ಣ ಕಣಕೆ ಯಾರದೋ ಗೋಡೆಯಲಿ ಒಂದಿಷ್ಟು ಜಾಗ”. ಮೋಡಕ್ಕೆ ಬೇಕೋ ಬೇಡವೋ, ಎಲ್ಲೋ ಇರುವ ಹನಿಯ ಋಣವನ್ನು ಕಟ್ಟಿ ಕೊಡುವುದೇ ಬದುಕು.
ಸಂಬಂಧಗಳ ಹಾದಿ ಸುಲಭವಲ್ಲ, ಕೆಲವೊಮ್ಮೆ ಬಿಸಿಲು, ಕೆಲವೊಮ್ಮೆ ತಂಪು ನೆರಳು. ಕದಲದ ಬಸ್ ನಿಲ್ದಾಣವೊಂದು, ಅದೆಷ್ಟು ಪ್ರೀತಿ ಚಿಗುರೊಡೆಯುವುದನ್ನು ಕಂಡು ನಕ್ಕಿಲ್ಲ. ಅದೆಷ್ಟು ಕೊನೆಯ ಭೇಟಿಯ ಕಣ್ಣೀರಿಗೆ ಸಾಕ್ಷಿಯಾಗಿಲ್ಲ? “ಕಾಲ” ಎಲ್ಲವನ್ನೂ ಸಹಿಸು ಎನ್ನುವ ಕಲೆಗಾರ, ನೆನಪುಗಳ ಕೊಲೆಗಾರ.
ಅವಳೊಬ್ಬಳು, ನಿನ್ನೆ ಫೋನಾಯಿಸಿ ಏನೋ ಹೇಳಲು ತವಕಿಸಿದಳು. ಅವಳ ಉತ್ಸಾಹಕ್ಕೆ ಅಲ್ಪ ವಿರಾಮವಿತ್ತು, ಏನೋ ಕೆಲಸದಲ್ಲಿದ್ದ ನಾನು, ಸಂಜೆ ಮಾತಾಡುವೆ ಎಂದು ವಿರಮಿಸಿದೆ. ಮತ್ತೆ ಮರೆತೆ. ಆ ನಿರ್ಲಕ್ಷಕ್ಕೆ ಶಿಕ್ಷೆಯೇನೋ ಎಂಬಂತೆ ಅವಳು, ಆ ರಾತ್ರಿ ಕಾರು ಅಪಘಾತದಲ್ಲಿ ಸತ್ತಿದ್ದಳು. ಆ ಸ್ನೇಹಿತೆ ಮತ್ತೆ ಮತ್ತೆ ನೆನಪಾಗಿ ಮಾತು ಮರೆಸುತ್ತಾಳೆ. ಕೊಟ್ಟವರಾರು ನನ್ನನ್ನು ನೋಯಿಸುವ ಹಕ್ಕನ್ನು ಅವಳಿಗೆ.
ಬರೆದದ್ದು ಒಂದೇ ಸಲವಾದರೂ, ಬರಹವನ್ನು ನೂರು ಸಲ ಓದಬಹುದು. ಬರವಣಿಗೆ ಘಳಿಗೆಯಾದರೆ, ಓದು ಅದರ ಪುನರ್ಮನನ. ನೆನಪುಗಳನ್ನು ಮತ್ತೆ ಅನುಭವಿಸುವ ರಹದಾರಿ.
ಬದುಕಿಗೆ ಎದುರಾದವರು ದಾರಿಹೋಕರಿರಬಹುದು, ನಡೆದು ಒಂದು ಘಳಿಗೆ ವಿಶ್ರಮಿಸಲು ನಿತ್ತಿರಬಹುದು. ಇನ್ನೂ ಕೆಲವರು ವಿಶ್ರಮಿಸಲೆಂದು ಜಾಗ ಕೊಟ್ಟರೆ, ಅದೇ ಮನೆಯೆಂದು ಪ್ರೀತಿಸಬಹುದು. ಇನ್ನೂ ಕೆಲವರು ಆಗಾಗ ಭೇಟಿ ಕೊಡುವ ಸ್ನೇಹಿತರಿರಬಹುದು. ಯಾರಾದಾರಾಗಲಿ ಬದುಕು ನಿಲ್ಲುವುದಿಲ್ಲ. ಬಂದವರನ್ನು ಜೊತೆಗೂಡಿಸಿಕೊಂಡು ನಡೆಯುವುದೇ. ನಡೆವಾಗ ಆಕಸ್ಮಾತ್ ಇನ್ನೊಬ್ಬರ ಬದುಕಲ್ಲಿ ಕಾಲಿಟ್ಟರೆ, ಕ್ಷಮೆ ಕೇಳಿ ಇಷ್ಟವಾದರೆ ಜಾಗ ಕೇಳಿ, “ಕದಳಿ ವನವನ್ನು ಗಜ ಮುರಿದಂತೆ” ಮಾಡದಿದ್ದರಾಯಿತಷ್ಟೆ.
ಒಂದು ಜೀವವೆಂದರೆ ಬರಿಯ ಒಂದು ದೇಹವಲ್ಲ. ಅದೆಷ್ಟೋ ನೆನಪನ್ನು ಹೊತ್ತು ತೂಗುವ ಜೋಲಿ. ನೋವು, ನಲಿವು,ಹುಟ್ಟು, ಸಾವುಗಳನ್ನು ಕಂಡ ಜೀವಂತ ಚಿತ್ರ. ಎಷ್ಟೋ ನೋವನ್ನು ಮೌನದಲ್ಲಿ ತುರುಕಿಟ್ಟ, ಸಂಯಮದ ಯಾತ್ರೆ. ಇನಿತು ಖುಷಿಯನ್ನು ಖುದ್ದಾಗಿ ಹಂಚಿದ, ಗದ್ದಲದ ಪಯಣ. ಜೀವವೆಂದರೆ ಜೀವನ, ವ್ಯಕ್ತಿತ್ವ, ಒಬ್ಬ ಸ್ನೇಹಿತ, ಒಂದೊಳ್ಳೆ ಸಂಬಂಧ, ಬಂಧು, ಎಡವಿದ ಕುರುಡನಿಗೆ ರಸ್ತೆ ದಾಟಿಸಿ ಹೆಸರು ಹೇಳದೆ ಹೋದ ಪಯಣಿಗ, ನಿನ್ನೆಯ ಅರ್ಧ ಬೀಡಿಯನ್ನು ಉಳಿಸಿಕೊಂಡು, ಮಣ್ಣಾಡುತ್ತಿದ್ದ ಮಗುವಿಗೆ ಮಿಠಾಯಿ ಕೊಡಿಸಿದ ದಾರಿಹೋಕ, ಕಡೆಗಣಿಸಿದ ಮುದಿ ತಾತನಿಗೆ ಊರುಗೋಲಾದ ಮೊಮ್ಮಗ, ಬದುಕ ಮಾರಾಟಗಳ ಮಧ್ಯೆ ಬದುಕಿಗಾಗಿ ಹಂಬಲಿಸಿದ ವೇಶ್ಯೆ, ಕಟ್ಟುವ ಕೆಲಸದ ಮಧ್ಯೆ, ರಾಷ್ಟ್ರ ಗೀತೆಗೆ ಗೌರವಿಸಿ ಎದ್ದು ನಿಂತ ಗಾರೆಯವ, ಕೊಲೆ ದರೋಡೆಗಳನ್ನು ಬದಿಗಿರಿಸಿ ಸಾಧನೆಗಳನ್ನು ಪ್ರಕಟಿಸಿದ ಧೀಮಂತ ಪತ್ರಕರ್ತ, ಕಲ್ಲೆದೆಯನ್ನು ಹೊತ್ತರೂ, ಮಧ್ಯರಾತ್ರಿ ಮಗುವ ನೆನೆಸಿ ಅತ್ತ ಯೋಧ. ಎದೆ ಯಾವುದಾದರೇನು ಎಲ್ಲರೊಳಗೊಂದು ತಲ್ಲಣವಿದೆ, ಪ್ರೀತಿಯ ಒರತೆಯ ಕೊರತೆ ಇದೆ. ಪ್ರೀತಿಯನ್ನೆರೆವ ಚೇತನವಿದೆ. ಗುರುತಿಸುವ ಮನಸ್ಸು ಬೇಕಷ್ಟೆ.
ನೋಯಿಸುವ ಮೊದಲು ಪಾತ್ರ ಬದಲಾಯಿಸಿ ಆ ಜೀವದ ಚೀಲದೊಳಗೊಮ್ಮೆ ಇಳಿದು ಬನ್ನಿ. ಉತ್ತರ ಸಿಕ್ಕಿದರೂ ಸಿಕ್ಕೀತು!!!